ಕರಾವಳಿ ವಾಯ್ಸ್ ನ್ಯೂಸ್
ಕುಮಟಾ: ತಾಲೂಕಿನ ಗೋಕರ್ಣದ ಮುಖ್ಯ ಕಡಲತೀರದಲ್ಲಿ ಬುಧವಾರ ಬೆಳಗ್ಗೆ ಬೆಂಗಳೂರಿನ ಮೂಲದ ವ್ಯಕ್ತಿಯ ಶವ ಪತ್ತೆಯಾಗಿದೆ.

ರಾಮತೀರ್ಥ ಸಮುದ್ರದ ನೀರಿನಲ್ಲಿ ಶವ ತೇಲುತ್ತಿರುವುದನ್ನು ಗಮನಿಸಿದ ಮೀನುಗಾರರು ಬೀಚ್ ಸಿಬ್ಬಂದಿಗೆ ಮಾಹಿತಿ ನೀಡಿದರು. ಬಳಿಕ ಬೀಚ್ ಸೂಪರ್ವೈಸರ್ ರವಿ ನಾಯ್ಕ್ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಶವವು ಗೋಕರ್ಣ ಮುಖ್ಯ ಕಡಲತೀರಕ್ಕೆ ತೇಲಿ ಬಂದು ಬಿದ್ದಿರುವುದು ತಿಳಿದುಬಂದಿದೆ.

ಮೃತರನ್ನು ಬೆಂಗಳೂರು ಉತ್ತರದ ದಾಸರಹಳ್ಳಿ ನಿವಾಸಿ ಜೆ.ಎಸ್. ವೆಂಕಟೇಶ್ (68) ಎಂದು ಗುರುತಿಸಲಾಗಿದೆ. ಕರ್ತವ್ಯನಿರತ ಜೀವರಕ್ಷಕ ಸಿಬ್ಬಂದಿ ಶವದ ಕಾಲಿಗೆ ಹಗ್ಗ ಕಟ್ಟಿ ಸಮುದ್ರದಿಂದ ಮೇಲಕ್ಕೆ ತಂದು, ಬಳಿಕ ಆಂಬುಲೆನ್ಸ್ಗೆ ಸಾಗಿಸಲು ಸಹಕರಿಸಿದರು.
ಸ್ಥಳದಲ್ಲಿ ಗೋಕರ್ಣ ಪೊಲೀಸ್ ಸಿಬ್ಬಂದಿ, ಬೀಚ್ ಸೂಪರ್ವೈಸರ್ ರವಿ ನಾಯ್ಕ್, ಜೀವರಕ್ಷಕರಾದ ರೋಷನ್ ಖಾರ್ವಿ, ಮೋಹನ ಅಂಬಿಗ, ಶಿವಪ್ರಸಾದ್ ಅಂಬಿಗ ಹಾಗೂ ಕರಾವಳಿ ಕಾವಲು ಪಡೆ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು. ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


