ಕರಾವಳಿ ವಾಯ್ಸ್ ನ್ಯೂಸ್
ಕುಮಟಾ: ತಾಲೂಕಿನ ಗೋಕರ್ಣದ ಓಂ ಕಡಲತೀರದಲ್ಲಿ ಸಮುದ್ರ ಸುಳಿಗೆ ಸಿಲುಕಿ ಹೈದ್ರಾಬಾದ್ ಮೂಲದ ಯುವ ಪ್ರವಾಸಿಗನೊಬ್ಬ ಮೃತಪಟ್ಟ ಘಟನೆ ಸೋಮವಾರ ರಾತ್ರಿ ನಡೆದಿದೆ.
ಹೈದ್ರಾಬಾದ್ನ ನಾಲ್ವರು ಸ್ನೇಹಿತರು ಪ್ರವಾಸ ನಿಮಿತ್ತ ಗೋಕರ್ಣಕ್ಕೆ ಬಂದಿದ್ದರು. ಸೋಮವಾರ ಸಂಜೆ ಸುಮಾರು 7 ಗಂಟೆ ವೇಳೆ ಓಂ ಕಡಲತೀರದಲ್ಲಿ ಸಮುದ್ರಕ್ಕೆ ಇಳಿದು ಈಜಾಡುತ್ತಿದ್ದಾಗ ಯಶವಂತಕುಮಾರ ಆನಂದ್ (24) ಎಂಬಾತ ಸಮುದ್ರ ಸುಳಿಗೆ ಸಿಲುಕಿದ್ದಾನೆ ಎನ್ನಲಾಗಿದೆ.
ತಕ್ಷಣ ಸ್ಥಳದಲ್ಲಿದ್ದವರು ಆತನನ್ನು ರಕ್ಷಿಸಿ ದಡಕ್ಕೆ ಕರೆತಂದು ಖಾಸಗಿ ಆಂಬುಲೆನ್ಸ್ ಮೂಲಕ ಗೋಕರ್ಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಿದರು. ಆದರೆ ವೈದ್ಯರು ಪರೀಕ್ಷಿಸಿ ಆತ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಕುರಿತು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
