ಕರಾವಳಿ ವಾಯ್ಸ್ ನ್ಯೂಸ್ 

ಸಿದ್ದಾಪುರ: ಜೋಗ ಜಲಪಾತದ ಅಪಾಯಕಾರಿ ಪ್ರದೇಶವಾದ ರಾಜಾ ಫಾಲ್ಸ್‌ನ ಕಲ್ಲಿನ ಬಂಡೆಯ ಮೇಲೆ ತೆರಳಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ ಆರೋಪದ ಮೇಲೆ ಮೂವರು ಯುವಕರ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸ್ ಉಪ ನಿರೀಕ್ಷಕ (ಎಲ್ & ಓ) ಶಾಂತಿನಾಥ ಕೆ. ಪಾಸಾನೆ ಅವರು ನೀಡಿದ ದೂರಿನ ಮೇರೆಗೆ ಠಾಣೆ ಅಪರಾಧ ಸಂಖ್ಯೆ 153/2026ರಲ್ಲಿ ಭಾರತೀಯ ನ್ಯಾಯ ಸಂಹಿತೆ-2023ರ ಕಲಂ 125 ಹಾಗೂ 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಆರೋಪಿಗಳನ್ನು ತೀರ್ಥಹಳ್ಳಿ ತಾಲೂಕಿನ ಜೋಗಿನ್‌ಕೊಪ್ಪ ನಿವಾಸಿಗಳಾದ ಮೋಹನ ಶುಭಕರ ಗೌಡ (26), ಭರತ ಗೌಡ (27) ಹಾಗೂ ಮದನ ಗೌಡ ಎಂದು ಗುರುತಿಸಲಾಗಿದೆ. ಇವರಲ್ಲಿ ಮೋಹನ ಯೂಟ್ಯೂಬರ್ ಆಗಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಜೂನ್ 29ರಂದು ಸಾಮಾಜಿಕ ಜಾಲತಾಣಗಳ ಮೇಲ್ವಿಚಾರಣೆ ವೇಳೆ ‘ಮಿಸ್ಟರ್ ಕನ್ನಡಿಗ’ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಜೋಗ ಜಲಪಾತದ ಅಪಾಯಕಾರಿ ಸ್ಥಳದಲ್ಲಿ ಚಿತ್ರೀಕರಿಸಲಾದ ವಿಡಿಯೋ ಪತ್ತೆಯಾಗಿದೆ. ತನಿಖೆಯಲ್ಲಿ ಆರೋಪಿಗಳು ಜೂನ್ 25ರಂದು ಜೋಗ ಜಲಪಾತದ ರಾಜಾ ಫಾಲ್ಸ್‌ನ ಕಲ್ಲಿನ ಬಂಡೆಯ ಮೇಲೆ ತೆರಳಿ ವಿಡಿಯೋ ಚಿತ್ರೀಕರಿಸಿ, ಜೂನ್ 28ರಂದು ಅದನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಿರುವುದು ಬೆಳಕಿಗೆ ಬಂದಿದೆ.

ಅಪಾಯಕಾರಿ ಪ್ರದೇಶಕ್ಕೆ ಪ್ರವೇಶ ನಿಷೇಧಿಸಿ ಎಚ್ಚರಿಕೆ ಹಾಗೂ ಸೂಚನಾ ಫಲಕಗಳನ್ನು ಅಳವಡಿಸಿದ್ದರೂ ಅವುಗಳನ್ನು ಲೆಕ್ಕಿಸದೆ ವಿಡಿಯೋ ಚಿತ್ರೀಕರಿಸಿರುವುದು ಇತರ ಪ್ರವಾಸಿಗರಿಗೂ ಪ್ರೇರಣೆಯಾಗುವ ಸಾಧ್ಯತೆ ಇದ್ದು, ಮಾನವ ಜೀವಕ್ಕೆ ಅಪಾಯ ಉಂಟುಮಾಡುವ ಕೃತ್ಯ ಎಸಗಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

 

Please Share: