ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ತಾಲ್ಲೂಕಿನ ಅಸ್ನೋಟಿಯಲ್ಲಿ ಕಟ್ಟಡ ಕಾರ್ಮಿಕನೊಬ್ಬನನ್ನು ಶನಿವಾರ ತಡರಾತ್ರಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಗುಜರಾತ್ ಮೂಲದ ದೆವೇಶ ರಾಥೋಡ (28) ಹತ್ಯೆಯಾದ ಕಾರ್ಮಿಕನಾಗಿದ್ದಾನೆ. ಆತನೊಂದಿಗೆ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರು ಮದ್ಯದ ಮತ್ತಿನಲ್ಲಿ ಗಲಾಟೆ ನಡೆಸಿ ಈ ಕೃತ್ಯ ಎಸಗಿದ್ದಾರೆ ಎಂದು ಚಿತ್ತಾಕುಲ ಠಾಣೆ ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಬಾಗಲಕೋಟೆ ಜಿಲ್ಲೆಯ ಶಿರೂರು ಗ್ರಾಮದ ಶಿವಾನಂದ ನಾಯ್ಕ (45) ಹಾಗೂ ಹಾವೇರಿ ಜಿಲ್ಲೆಯ ಸವಣೂರಿನ ಮರಿಯಪ್ಪ ಹರಿಜನ (43) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕುಡಿದ ಮತ್ತಿನಲ್ಲಿ ಉಂಟಾದ ಜಗಳವೇ ಹತ್ಯೆಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಹತ್ಯೆಯಾದ ದೆವೇಶ ರಾಥೋಡ ಸೇರಿದಂತೆ ಆರೋಪಿಗಳು ಅಸ್ನೋಟಿಯಲ್ಲಿ ನಿವೃತ್ತ ನೌಕರ ಕಮಲಕಾರ ಗಡಕರ ಅವರು ಕಟ್ಟಿಸುತ್ತಿದ್ದ ಮನೆ ನಿರ್ಮಾಣ ಕಾಮಗಾರಿಗೆ ಗಾರೆ ಕೆಲಸ ಮಾಡಲು ಬಂದಿದ್ದ ಕಾರ್ಮಿಕರಾಗಿದ್ದರು.
ಘಟನೆ ಕುರಿತು ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
