ಕರಾವಳಿ ವಾಯ್ಸ್ ನ್ಯೂಸ್
ದಾಂಡೇಲಿ: ಎಮ್ಮೆ ಮೇಯಿಸಿಕೊಂಡು ಮನೆಗೆ ಮರಳುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಕರಡಿ ಏಕಾಏಕಿ ದಾಳಿ ನಡೆಸಿದ ಘಟನೆ ತಾಲೂಕಿನ ಪಣಸೋಲೆ ಸಮೀಪ ಭಾನುವಾರ ಸಂಜೆ ನಡೆದಿದೆ.
ಪಣಸೋಲೆ ನಿವಾಸಿ ಅಪ್ಪು ಬೊಮ್ಮ ಪಿಂಗಳೆ (34) ಕರಡಿ ದಾಳಿಗೆ ತುತ್ತಾದವರು. ದಾಳಿಯಲ್ಲಿ ಅವರ ಬಲಭುಜ, ಸೊಂಟ, ಬೆನ್ನು ಹಾಗೂ ಎಡಗೈಗೆ ಗಾಯಗಳಾಗಿವೆ. ಘಟನೆ ಗಮನಿಸಿದ ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಗಾಯಾಳುವನ್ನು ಕೂಡಲೇ ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಪಣಸೋಲೆ ಸುತ್ತಮುತ್ತ ಕರಡಿ ಓಡಾಟ ಹೆಚ್ಚಾಗಿರುವುದರಿಂದ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ಒಂದೇ ವಾರದಲ್ಲಿ ದಾಂಡೇಲಿ ತಾಲೂಕಿನಲ್ಲಿ ಇದು ಎರಡನೇ ಕರಡಿ ದಾಳಿ ಪ್ರಕರಣವಾಗಿದ್ದು, ಅರಣ್ಯ ಇಲಾಖೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.


