ಕರಾವಳಿ ವಾಯ್ಸ್ ನ್ಯೂಸ್ 

ಕುಮಟಾ: ಸಮುದ್ರ ತೀರದಲ್ಲಿ ಅಪಾಯದ ಕ್ಷಣಗಳಲ್ಲಿ ಪ್ರವಾಸಿಗರ ಜೀವ ರಕ್ಷಣೆ ಮಾಡುತ್ತಿರುವ ಜೀವರಕ್ಷಕ ಸಿಬ್ಬಂದಿಗೆ ಲಯನ್ಸ್ ಕ್ಲಬ್ ವತಿಯಿಂದ ಗೌರವಪೂರ್ಣ ಸನ್ಮಾನ ಕಾರ್ಯಕ್ರಮ ನಡೆಯಿತು.

ಮೇ 27ರಂದು ಸಂಜೆ 7 ಗಂಟೆಗೆ ತಾಲೂಕಿನ ಗೋಕರ್ಣದ ಐಶ್ವರ್ಯ ಹೋಂ ಸ್ಟೇ ಮೇಲ್ಮಹಡಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗೋಕರ್ಣ ಮೆನ್ ಬೀಚ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಸೇವಾ ಮನೋಭಾವ, ಧೈರ್ಯ, ಸ್ಥೈರ್ಯ ಮತ್ತು ಸಾಹಸೋತ್ಸಾಹದಿಂದ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ಸೇವೆಯನ್ನು ಕಾರ್ಯಕ್ರಮದಲ್ಲಿ ಶ್ಲಾಘಿಸಲಾಯಿತು. ಅಪಾಯದ ಸಂದರ್ಭಗಳಲ್ಲಿಯೂ ಸಂಯಮದಿಂದ ಕಾರ್ಯನಿರ್ವಹಿಸಿ ಹಲವಾರು ಪ್ರವಾಸಿಗರ ಜೀವ ಉಳಿಸಿರುವುದು ವಿಶೇಷವಾಗಿ ಪ್ರಸ್ತಾಪಿಸಲಾಯಿತು.

 

“ಕಾಯಕವೇ ಕೈಲಾಸ” ಎನ್ನುವ ಮನೋಭಾವದೊಂದಿಗೆ ಜೀವ ರಕ್ಷಣೆ ಕಾರ್ಯದಲ್ಲಿ ತೊಡಗಿರುವ ಇವರ ಸೇವೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಗಣ್ಯರು ಅಭಿಪ್ರಾಯಪಟ್ಟರು.

ಸನ್ಮಾನಿತರಾಗಿ ರವಿ ನಾಯ್ಕ್ (ಎಕ್ಸ್-ಆರ್ಮಿ, ಬೀಚ್ ಸೂಪರ್ವೈಸರ್), ಶೇಖರ್ ಹರಿಕಂತ್ರ (ಪ್ರವಾಸಿ ಮಿತ್ರ), ಮೋಹನ್ ಅಂಬಿಗ, ಶಿವಪ್ರಸಾದ ಅಂಬಿಗ, ಲೋಕೇಶ್ ಹರಿಕಂತ್ರ ಹಾಗೂ ರೋಶನ್ ಖಾರ್ವಿ ಅವರನ್ನು ಗೌರವಿಸಿ ಅಭಿನಂದಿಸಲಾಯಿತು.

ಗೋಕರ್ಣ ಕಡಲತೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಜೀವರಕ್ಷಕ ಸಿಬ್ಬಂದಿ, ಜೀವದ ಹಂಗು ತೊರೆದು ಅನೇಕ ಪ್ರವಾಸಿಗರನ್ನು ರಕ್ಷಣೆ ಮಾಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

 

Please Share: