ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ತಾಲೂಕಿನ ಅಮದಳ್ಳಿ ಗ್ರಾಮದಲ್ಲಿ ಜನವಸತಿ ಪ್ರದೇಶದೊಳಗೆ ಮಂಗಳವಾರ ರಾತ್ರಿ ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿಕೊಂಡು ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಯಿತು.
ರಾತ್ರಿ ಸುಮಾರು 9.30 ಗಂಟೆ ಸುಮಾರಿಗೆ ಅಮದಳ್ಳಿ ಭೂದೇವಿ ದೇವಸ್ಥಾನದ ಸಮೀಪದ ಮನೆಯೊಂದರ ಎದುರುಭಾಗದಲ್ಲಿ ಈ ಹೆಬ್ಬಾವು ಪ್ರತ್ಯಕ್ಷವಾಗಿದೆ. ಭಾರೀ ಗಾತ್ರದ ಹಾವನ್ನು ಕಂಡ ಸಾರ್ವಜನಿಕರು ಬೆಚ್ಚಿಬಿದ್ದಿದ್ದು, ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಈ ಕುರಿತು ಸ್ಥಳೀಯ ನಿವಾಸಿ ಇಂಜಿನಿಯರ್ ಕಿರಣ ತೆಂಡೂಲ್ಕರ್ ಅವರು ‘ಕರಾವಳಿ ವಾಯ್ಸ್’ಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ಅರಣ್ಯ ಇಲಾಖೆಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ಇದಾದ ಬಳಿಕ ಹೆಬ್ಬಾವು ಅಲ್ಲಿಂದ ನಿಧಾನವಾಗಿ ಸರಿದು ಹತ್ತಿರದ ಗಿಡಗಂಟಿಗಳೊಳಗೆ ಮರೆಯಾಗಿರುವುದಾಗಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಎಚ್ಚರಿಕೆಯಿಂದ ಇರಬೇಕೆಂದು ಸೂಚಿಸಲಾಗಿದೆ.
