ಕರಾವಳಿ ವಾಯ್ಸ್ ನ್ಯೂಸ್
ಶಿರಸಿ: ಕಳೆದುಹೋಗಿದ್ದ ಸುಮಾರು 70 ಸಾವಿರ ರೂ. ಮೌಲ್ಯದ ಬಂಗಾರದ ಉಂಗುರ, 60 ಸಾವಿರ ರೂ. ನಗದು, ಎರಡು ಮೊಬೈಲ್ಗಳು ಹಾಗೂ ಮಹತ್ವದ ದಾಖಲೆಗಳನ್ನು ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸುವಲ್ಲಿ ಶಿರಸಿ ಹೊಸ ಮಾರುಕಟ್ಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರದ ಮಾರುತಿ ಗಲ್ಲಿಯ ನಿವಾಸಿ ಸೌಮ್ಯ ಹೆಬ್ಬಾಳ ಅವರು ಬಂಗಾರದ ಉಂಗುರ ಕಳೆದುಹೋಗಿರುವ ಕುರಿತು ಹಾಗೂ ಬನವಾಸಿ ರಸ್ತೆಯ ನಿವಾಸಿ ದಯಾನಂದ ಹೆಗಡೆ ಅವರು ನಗದು, ಮೊಬೈಲ್ಗಳು ಮತ್ತು ದಾಖಲೆಗಳು ಕಳೆದುಹೋಗಿರುವ ಕುರಿತು ಹೊಸ ಮಾರುಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರಿನ ಆಧಾರದ ಮೇಲೆ ಕಾರ್ಯಪ್ರವೃತ್ತರಾದ ಠಾಣೆಯ ಅಪರಾಧ ತನಿಖಾ ವಿಭಾಗದ ಸಿಬ್ಬಂದಿ ಮಾಹಿತಿ ಕಲೆಹಾಕಿ ಕಳೆದುಹೋದ ವಸ್ತುಗಳನ್ನು ಪತ್ತೆಹಚ್ಚಿದರು. ಬಳಿಕ ಬಂಗಾರದ ಉಂಗುರವನ್ನು ಸೌಮ್ಯ ಹೆಬ್ಬಾಳ ಅವರಿಗೆ ಹಾಗೂ ನಗದು, ಮೊಬೈಲ್ಗಳು ಮತ್ತು ದಾಖಲೆಗಳನ್ನು ದಯಾನಂದ ಹೆಗಡೆ ಅವರಿಗೆ ಪಿ.ಎಸ್.ಐ ಬಸವರಾಜ ಕನಶೆಟ್ಟಿ ಅವರ ಮೂಲಕ ಹಸ್ತಾಂತರಿಸಲಾಯಿತು. ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
