ಕರಾವಳಿ ವಾಯ್ಸ್ ನ್ಯೂಸ್
ಬೆಂಗಳೂರು, ಆ.7: ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬಿ.ಕೆ. ಹರಿಪ್ರಸಾದ್ ಅವರ ಮನವೊಲಿಕೆ ಬಳಿಕ ಅವರು ಉಪಸಭಾಪತಿಗೆ ರಾಜೀನಾಮೆ ಪತ್ರ ನೀಡಿದ್ದಾರೆ.
2022ರಿಂದ ಸಭಾಪತಿಯಾಗಿದ್ದ ಹೊರಟ್ಟಿ, ಸದನದಲ್ಲಿ ಬಹುಮತದ ಬಲದಿಂದ ಅವಿಶ್ವಾಸ ನಿರ್ಣಯ ಎದುರಿಸುವುದಕ್ಕಿಂತ ಪೀಠದ ಘನತೆ ಉಳಿಯಬೇಕು ಎಂಬ ಕಾರಣದಿಂದ ಗೌರವಯುತವಾಗಿ ಹುದ್ದೆ ತ್ಯಜಿಸುವ ನಿರ್ಧಾರ ಕೈಗೊಂಡಿದ್ದೇನೆ ಎಂದು ಹೇಳಿದ್ದಾರೆ. 46 ವರ್ಷಗಳ ರಾಜಕೀಯ ಜೀವನದಲ್ಲಿ 18 ಮುಖ್ಯಮಂತ್ರಿಗಳು ಹಾಗೂ ಹಲವು ಸಭಾಪತಿಗಳೊಂದಿಗೆ ಕೆಲಸ ಮಾಡಿದ್ದು, ಪಕ್ಷಾತೀತವಾಗಿ ಸದನ ನಡೆಸಿದ್ದೇನೆ ಎಂದರು.
ರಾಜೀನಾಮೆಗೆ ಸಂಬಂಧಿಸಿದ ಎಲ್ಲ ಬೆಳವಣಿಗೆಗಳು ಹಾಗೂ ತಮ್ಮನ್ನು ನಡೆಸಿಕೊಂಡ ರೀತಿಯ ಬಗ್ಗೆ ಆಗಸ್ಟ್ 14ರಂದು ಸದನದಲ್ಲೇ ಬಹಿರಂಗವಾಗಿ ಮಾತನಾಡುವುದಾಗಿ ಹೊರಟ್ಟಿ ತಿಳಿಸಿದ್ದಾರೆ. ಅವರ ರಾಜೀನಾಮೆಯಿಂದ ಹೊಸ ಸಭಾಪತಿ ಆಯ್ಕೆಗೆ ದಾರಿ ಸುಗಮವಾಗಿದ್ದು, ವಿಧಾನ ಪರಿಷತ್ನಲ್ಲಿ ಹೊಸ ನಾಯಕತ್ವಕ್ಕೆ ವೇದಿಕೆ ಸಿದ್ಧವಾಗಿದೆ.
ಆ. 14 ರಂದು ಪರಿಷತ್ ಉಪಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ಬಳಿಕ ಸಭಾಪತಿ ಆಯ್ಕೆ ನಡೆಯಲಿದೆ ಎಂದು ಸಿಎಂ ಡಿಕೆಶಿ ಹೇಳಿಕೆ ನೀಡಿದ್ದಾರೆ. ಈ ಮೂಲಕ ಎರಡು ಸ್ಥಾನ ಕಾಂಗ್ರೆಸ್ ನವರದಾಗಲಿದ್ದು, ಸಭಾಪತಿ ಸ್ಥಾನಕ್ಕೆ ಸಲೀಮ್ ಹಾದಿ, ಉಪಸಭಾಪತಿ ಸ್ಥಾನಕ್ಕೆ ನಟಿ ಉಮಾಶ್ರೀ ಅವರನ್ನು ಇಳಿಸಲು ಕಾಂಗ್ರೆಸ್ ಮುಂದಾಗಿದೆ ಎಂದು ತಿಳಿದುಬಂದಿದೆ.
