ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಬಾಡ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಬಾಡದ ಶಿವಾಜಿ ಬಾಲಮಂದಿರ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ವಿವಿಧ ವೈಯಕ್ತಿಕ ಹಾಗೂ ಗುಂಪು ಕ್ರೀಡೆಗಳಲ್ಲಿ ಉತ್ತಮ ಸಾಧನೆ ತೋರಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಹಿರಿಯ ಪ್ರಾಥಮಿಕ ವಿಭಾಗದಲ್ಲಿ ದರ್ಶನ ಗಾಡಿ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಪಡೆದರೆ, ಗಣೇಶ್ ರಸಾಲ್ 600 ಮೀ. ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಶುಭಂ ಗುನಗಿ ಎತ್ತರ ಜಿಗಿತ ಹಾಗೂ ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಬಾಲಕರ ಖೋ-ಖೋ, ಬಾಲ್ ಬ್ಯಾಡ್ಮಿಂಟನ್ ಹಾಗೂ ಥ್ರೋಬಾಲ್ ತಂಡಗಳು ಪ್ರಥಮ ಸ್ಥಾನ, ವಾಲಿಬಾಲ್ ತಂಡ ದ್ವಿತೀಯ ಸ್ಥಾನ ಪಡೆದಿದೆ. ಬಾಲಕಿಯರ ವಿಭಾಗದಲ್ಲಿ ಬ್ಯಾಡ್ಮಿಂಟನ್ ತಂಡ ಪ್ರಥಮ ಹಾಗೂ ಖೋ-ಖೋ ಮತ್ತು ವಾಲಿಬಾಲ್ ತಂಡಗಳು ದ್ವಿತೀಯ ಸ್ಥಾನ ಪಡೆದಿವೆ.

ಪ್ರೌಢಶಾಲಾ ವಿಭಾಗದಲ್ಲಿ ವೈಭವಿ ಎಸ್. ನಾಯ್ಕ 3000 ಮೀ. ಹಾಗೂ 1500 ಮೀ. ಓಟದಲ್ಲಿ ಪ್ರಥಮ ಮತ್ತು 800 ಮೀ. ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ಬಾಡ ವಲಯದ ವೀರಾಗ್ರಣಿ ಬಾಲಕಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಉಮಾ ಪಾಟೀಲ್ ಎತ್ತರ ಜಿಗಿತದಲ್ಲಿ ಪ್ರಥಮ ಹಾಗೂ ಸೇಹಾ ಬೇರಾ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಪ್ರೌಢಶಾಲಾ ಬಾಲಕರ ಬಾಲ್ ಬ್ಯಾಡ್ಮಿಂಟನ್ ಹಾಗೂ ಥ್ರೋಬಾಲ್ ತಂಡಗಳು ದ್ವಿತೀಯ ಸ್ಥಾನ ಪಡೆದರೆ, ಬಾಲಕಿಯರ ವಾಲಿಬಾಲ್ ತಂಡ ಪ್ರಥಮ ಹಾಗೂ ಬಾಲ್ ಬ್ಯಾಡ್ಮಿಂಟನ್ ಮತ್ತು ಖೋ-ಖೋ ತಂಡಗಳು ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿವೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಿವಾಜಿ ಶಿಕ್ಷಣ ಸಂಸ್ಥೆ ಬಾಡದ ಅಧ್ಯಕ್ಷ ಕೆ.ಪಿ. ನಾಯ್ಕ, ಉಪಾಧ್ಯಕ್ಷ ಅಶೋಕ್ ನಾಯ್ಕ, ಕಾರ್ಯದರ್ಶಿ ಪಿ.ಕೆ. ರಾಣೆ, ಸಹ ಕಾರ್ಯದರ್ಶಿ ಎಸ್.ಡಿ. ಕದಂ, ಖಜಾಂಚಿ ಕಿಶೋರ್ ರಾಣೆ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ಮುಖ್ಯಾಧ್ಯಾಪಕಿ ರಾಜೇಶ್ವರಿ ನಾಯ್ಕ, ದೈಹಿಕ ಶಿಕ್ಷಣ ಶಿಕ್ಷಕ ಉಲ್ಲಾಸ್ ಆರ್. ನಾಯ್ಕ, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಹಾಗೂ ಪಾಲಕರು ಅಭಿನಂದಿಸಿದ್ದಾರೆ.


