ಕರಾವಳಿ ವಾಯ್ಸ್ ನ್ಯೂಸ್ 

ಅಂಕೋಲಾ: ನೀರಿನ ಸುಳಿಗೆ ಸಿಲುಕಿ ಮುಳುಗಿ ಹೋಗುತ್ತಿದ್ದ ಪ್ರವಾಸಿಗನನ್ನು ಜೀವರಕ್ಷಕ ಸಿಬ್ಬಂದಿಯವರು ಸಮಯೋಚಿತವಾಗಿ ರಕ್ಷಿಸಿದ ಘಟನೆ ಸೋಮವಾರ ತಾಲೂಕಿನ ಅಚವೇ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ವಿಭೂತಿ ಫಾಲ್ಸ್‌ನಲ್ಲಿ ನಡೆದಿದೆ.

ತಮಿಳುನಾಡಿನ ಚೆನ್ನೈನ ಆದಿತ್ಯ (ಭಾಲಾದಿತ್ಯ) (19) ಎಂಬ ಯುವಕ ಈ ಅವಘಡಕ್ಕೆ ಒಳಗಾಗಿದ್ದು, ಜೀವರಕ್ಷಕ ಸಿಬ್ಬಂದಿಯ ತಕ್ಷಣದ ಕಾರ್ಯಾಚರಣೆಯಿಂದ ಜೀವಾಪಾಯದಿಂದ ಪಾರಾಗಿದ್ದಾನೆ. ಒಟ್ಟು 40 ಮಂದಿ ಪ್ರವಾಸಿಗರು ವಿಭೂತಿ ಫಾಲ್ಸ್‌ಗೆ ಪ್ರವಾಸಕ್ಕೆ ಆಗಮಿಸಿದ್ದು, ಈ ವೇಳೆ ಕೆಲವರು ಫಾಲ್ಸ್‌ನ ನೀರಿಗೆ ಇಳಿದಿದ್ದರು. ಅದೇ ಸಂದರ್ಭದಲ್ಲಿ ಆದಿತ್ಯ ನೀರಿನ ಸುಳಿಗೆ ಸಿಲುಕಿ ಮುಳುಗಲು ಪ್ರಾರಂಭಿಸಿದ್ದಾನೆ.

ಸ್ಥಳದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಜೀವರಕ್ಷಕ ಸಿಬ್ಬಂದಿ ಅಪಾಯವನ್ನು ಗಮನಿಸಿ ತಕ್ಷಣ ರಕ್ಷಣಾ ಕಾರ್ಯಕ್ಕೆ ಮುಂದಾದರು. ಹಗ್ಗ ಹಾಗೂ ಇತರೆ ರಕ್ಷಣಾ ಉಪಕರಣಗಳ ಸಹಾಯದಿಂದ ಯುವಕನನ್ನು ನೀರಿನಿಂದ ಮೇಲಕ್ಕೆ ಎಳೆದು ಸುರಕ್ಷಿತವಾಗಿ ಹೊರತಂದರು.

ಜೀವರಕ್ಷಕ ಸಿಬ್ಬಂದಿಯ ಧೈರ್ಯ ಹಾಗೂ ಸಮಯೋಚಿತ ಕ್ರಮದಿಂದ ಪ್ರವಾಸಿಗನ ಜೀವ ಉಳಿದಿದ್ದು, ಸ್ಥಳದಲ್ಲಿದ್ದವರು ಜೀವರಕ್ಷಕ ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

Please Share: