ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದ ಹನುಮಾನ್ ಮೂರ್ತಿಯ ಎದುರು ಭಾಗದಲ್ಲಿ ಅಪರೂಪದ ಜಾತಿಯ ಹಾಕ್ಸ್ಬಿಲ್ ಕಡಲಾಮೆಯ ಮೃತದೇಹ ಮಂಗಳವಾರ ಸಂಜೆ ಪತ್ತೆಯಾಗಿದೆ.
ಅಂದಾಜು 35 ರಿಂದ 40 ವರ್ಷ ವಯಸ್ಸಿನ ಈ ಕಡಲಾಮೆ ಕೆಲವು ದಿನಗಳ ಹಿಂದೆಯೇ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಕೋಸ್ಟಲ್ ಮರೈನ್ ಇಕೋ ಸಿಸ್ಟಮ್ ಸೆಲ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೃತದೇಹವನ್ನು ಬುಧವಾರ ಕುಂದಾಪುರದಿಂದ ಆಗಮಿಸಿದ ತಜ್ಞ ಪಶುವೈದ್ಯರಿಂದ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಯಿತು. ಪರೀಕ್ಷೆಯ ವೇಳೆ ಕಡಲಾಮೆಯ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಅವಶೇಷಗಳು ಪತ್ತೆಯಾಗಿದ್ದು, ಪ್ಲಾಸ್ಟಿಕ್ ಸೇವನೆಯೇ ಸಾವಿಗೆ ಕಾರಣವಾಗಿದೆ ಎಂಬುದು ಸ್ಪಷ್ಟವಾಗಿದೆ.
ಈ ಬಗ್ಗೆ ಸಾಮಾಜಿಕ ಅರಣ್ಯ ವಿಭಾಗದ ಅಧಿಕಾರಿ ಕಿರಣ್ ಮನ್ವಚಾರಿ ಮಾಹಿತಿ ನೀಡಿದ್ದು, ಸಮುದ್ರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಹೆಚ್ಚುತ್ತಿರುವುದು ಸಮುದ್ರ ಜೀವಿಗಳಿಗೆ ಭಾರೀ ಅಪಾಯ ಉಂಟುಮಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಪರಿಸರ ಸಂರಕ್ಷಣೆ ಹಾಗೂ ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸುವ ಅಗತ್ಯವನ್ನು ಮತ್ತೊಮ್ಮೆ ಒತ್ತಿಹೇಳಿದೆ.
