ಕರಾವಳಿ ವಾಯ್ಸ್ ನ್ಯೂಸ್
ಹೊನ್ನಾವರ: ಮುಗ್ಧ ನಗುವಿನಿಂದ ಮನೆಮಾತಾಗಿದ್ದ ಐದು ವರ್ಷದ ಪುಟ್ಟ ಬಾಲಕಿ ಒಂದು ಕ್ಷಣದ ಅವಘಡಕ್ಕೆ ಬಲಿಯಾಗಿದ್ದು, ತಾಲೂಕಿನ ಹೊಸಪಟ್ಟಣ ಗ್ರಾಮದಲ್ಲಿ ಮನಕಲಕುವ ವಾತಾವರಣ ಸೃಷ್ಟಿಸಿದೆ.
ಮನೆಯ ಆವರಣದಲ್ಲಿ ಆಟವಾಡುತ್ತಿದ್ದ ಆಶಿಕಾ ಹರೀಶ ನಾಯ್ಕ, ಯಾರೂ ಊಹಿಸದ ರೀತಿಯಲ್ಲಿ ವಿದ್ಯುತ್ ಆಘಾತಕ್ಕೆ ಒಳಗಾಗಿ ಜೀವ ಕಳೆದುಕೊಂಡ ಘಟನೆ ಗುರುವಾರ ಸಂಜೆ ನಡೆದಿದೆ.
ಆಟವೇ ಅವಳ ಜಗತ್ತು. ಮನೆಯ ತೋಟದಲ್ಲಿ ಓಡಾಡುತ್ತಾ, ನಗುತಿದ್ದ ಆಶಿಕಾ, ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಂಪ್ಸೆಟ್ ಬಳಿ ಹೋಗಿದ್ದಾಳೆ. ನೀರು ತುಂಬುವ ಕಾರ್ಯಕ್ಕಾಗಿ ಅಳವಡಿಸಿದ್ದ ವಿದ್ಯುತ್ ತಂತಿಗಳು ಅಲ್ಲಿ ಹರಡಿಕೊಂಡಿದ್ದವು. ಆ ತಂತಿಯ ಮೇಲೆ ಅವಳ ಕಾಲು ತಾಗುತ್ತಿದ್ದಂತೆ, ಕ್ಷಣಾರ್ಧದಲ್ಲಿ ಅವಳ ಚಿಕ್ಕ ದೇಹ ವಿದ್ಯುತ್ ಆಘಾತಕ್ಕೆ ಒಳಗಾಯಿತು.
ಆಘಾತದಿಂದ ಬೆಚ್ಚಿಬಿದ್ದ ಬಾಲಕಿ ತಪ್ಪಿಸಿಕೊಳ್ಳಲು ಹೋರಾಡಿದ್ದಾಳೆ. ಆದರೆ, ಅವಳ ಇನ್ನೊಂದು ಕಾಲು ತಂತಿಗಳ ರಾಶಿಯಲ್ಲಿ ಸಿಲುಕಿಕೊಂಡು, ಹೊರಬರಲು ಸಾಧ್ಯವಾಗದೆ ಅಲ್ಲೇ ಕುಸಿದುಬಿದ್ದಳು ಎಂಬುದು ತಿಳಿದುಬಂದಿದೆ. ಈ ಕ್ಷಣಗಳು ಮನೆಯವರ ಕಣ್ಣೆದುರೇ ಸಂಭವಿಸಿದ್ದಾಗ, ಅವರ ಕಣ್ಣೀರನ್ನು ನಿಲ್ಲಿಸಲು ಆಗದ ಸ್ಥಿತಿ ನಿರ್ಮಾಣವಾಯಿತು.
ತಕ್ಷಣವೇ ಆತಂಕಗೊಂಡ ಕುಟುಂಬಸ್ಥರು ಆಶಿಕಾಳನ್ನು ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರು ಆಕೆ ಆಗಲೇ ಮೃತಪಟ್ಟಿರುವುದಾಗಿ ತಿಳಿಸಿದಾಗ, ಆ ಕುಟುಂಬದ ಮೇಲೆ ಆಕಾಶವೇ ಬಿದ್ದಂತಾಯಿತು. ಕೆಲವೇ ಕ್ಷಣಗಳ ಹಿಂದೆ ಮನೆ ತುಂಬ ನಗುತ್ತಿದ್ದ ಮಗು, ಮೌನವಾಗಿ ಮಲಗಿರುವ ದೃಶ್ಯ ಎಲ್ಲರ ಮನಸ್ಸನ್ನು ಕಲಕುವಂತಾಗಿತ್ತು.
ಗ್ರಾಮದಲ್ಲೇ ಎಲ್ಲರಿಗೂ ಪ್ರಿಯಳಾಗಿದ್ದ ಆಶಿಕಾ ಸಾವಿನ ಸುದ್ದಿ ಹರಡುತ್ತಿದ್ದಂತೆ, ಹೊಸಪಟ್ಟಣದಲ್ಲಿ ಶೋಕದ ನೆರಳು ಆವರಿಸಿತು. ನೆರೆಹೊರೆಯವರು, ಸಂಬಂಧಿಕರು ಮನೆಗೆ ಧಾವಿಸಿ, ದುಃಖದಲ್ಲಿ ಮುಳುಗಿದ ಕುಟುಂಬಕ್ಕೆ ಸಾಂತ್ವನ ಹೇಳಲು ಯತ್ನಿಸಿದರು. ಆದರೆ, ಆ ತಾಯ್ತಂದೆಯ ನೋವು ಹೇಳತೀರದಂತಿತ್ತು.
ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ಕುರಿತು ತನಿಖೆ ನಡೆಯುತ್ತಿದೆ.
ಈ ದುರಂತ, ವಿದ್ಯುತ್ ಸಾಧನಗಳ ಬಳಕೆಯಲ್ಲಿ ಎಚ್ಚರಿಕೆಯ ಅಗತ್ಯವನ್ನು ಮತ್ತೆ ಒಂದು ಬಾರಿ ನೆನಪಿಸಿದೆ.
