ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಗಣಪತಿ ಮಂಟಪ ತರಲು ತೆರಳಿದ್ದ ವೇಳೆ ದೋಣಿ ಕಾಳಿ ನದಿಯ ಮಧ್ಯಭಾಗದಲ್ಲಿ ಮುಗುಚಿ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲೂಕಿನ ಉಳಗ ಗ್ರಾಮದಲ್ಲಿ ಭಾನುವಾರ ನಡೆದಿದೆ.

Banner Ad

ಮೃತರನ್ನು ಕಾರವಾರ ತಾಲೂಕಿನ ಸಿದ್ದರ ಗ್ರಾಮದ ಬಾಳಸು ಆಚಾರಿ (62) ಎಂದು ಗುರುತಿಸಲಾಗಿದೆ.

ಗಣೇಶೋತ್ಸವದ ಹಿನ್ನೆಲೆಯಲ್ಲಿ ಗಣಪತಿ ಮಂಟಪ ತರಲು ಬಾಳಸು ಆಚಾರಿ ಅವರು ಸಿದ್ದರ ಗ್ರಾಮದಿಂದ ಉಳಗ ಗ್ರಾಮಕ್ಕೆ ತೆರಳಿದ್ದರು. ಈ ವೇಳೆ ಕಾಳಿ ನದಿಯಲ್ಲಿ ದೋಣಿಯಲ್ಲಿ ಪ್ರಯಾಣಿಸುತ್ತಿದ್ದಾಗ ನದಿಯ ಮಧ್ಯಭಾಗದಲ್ಲಿ ಏಕಾಏಕಿ ದೋಣಿ ಮುಗುಚಿದೆ ಎನ್ನಲಾಗಿದೆ. ದೋಣಿ ಮುಗುಚಿದ ಪರಿಣಾಮ ಅವರು ನೀರಿಗೆ ಬಿದ್ದು ಮುಳುಗಿದ್ದಾರೆ.

ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮೂಡಿದ್ದು, ವಿಷಯ ತಿಳಿಯುತ್ತಿದ್ದಂತೆ ಕದ್ರಾ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ನದಿಯಲ್ಲಿ ಮುಳುಗಿರುವ ಬಾಳಸು ಆಚಾರಿ ಅವರ ದೇಹಕ್ಕಾಗಿ ಶೋಧ ಕಾರ್ಯ ಆರಂಭಿಸಲಾಯಿತು.

ಗಣಪತಿ ಮಂಟಪ ತರಲು ತೆರಳಿದ್ದ ವ್ಯಕ್ತಿ ದೋಣಿ ಮುಗುಚಿದ ದುರಂತದಲ್ಲಿ ಮೃತಪಟ್ಟಿರುವುದು ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ದುಃಖಕ್ಕೆ ಕಾರಣವಾಗಿದೆ.

ಘಟನೆ ಕದ್ರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕಿ ತನಿಖೆ ಮುಂದುವರಿಸಿದ್ದಾರೆ.

 

 

 

 

 

Please Share: