ಕರಾವಳಿ ವಾಯ್ಸ್ ನ್ಯೂಸ್ 

ಭಟ್ಕಳ: ಹಾವು ಕಚ್ಚಿ ಕಳೆದ ಒಂದು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ತಾಲೂಕಿನ ಶಿರಾಲಿ ಸಮೀಪದ ಅಳ್ವೆಕೊಡಿಯಲ್ಲಿ ನಡೆದಿದೆ.

ಮೃತರನ್ನು ಅಳ್ವೆಕೊಡಿಯ ನಾಗಮ್ಮ ನಾಗಪ್ಪ ನಾಯ್ಕ (71) ಎಂದು ಗುರುತಿಸಲಾಗಿದೆ.

ಮೇ 31ರಂದು ಬೆಳಿಗ್ಗೆ ಮನೆಯ ಬಚ್ಚಲಿನ ಬಳಿ ಒಟ್ಟುಗೂಡಿಸಿ ಇಟ್ಟಿದ್ದ ತೆಂಗಿನಕಾಯಿಗಳನ್ನು ತೆಗೆಯಲು ಹೋಗಿದ್ದ ವೇಳೆ, ನಾಗಮ್ಮ ಅವರ ಎಡಗೈ ತೋರುಬೆರಳಿಗೆ ಹಾವು ಕಚ್ಚಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರವಿವಾರರಂದು ಮಧ್ಯಾಹ್ನ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಅವರು ಮೃತಪಟ್ಟರು.

ಮೃತರ ಪುತ್ರ ಶಿವರಾಮ ನಾಗಪ್ಪ ನಾಯ್ಕ ನೀಡಿದ ದೂರಿನ ಮೇರೆಗೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು (ಯುಡಿಆರ್) ಪ್ರಕರಣ ದಾಖಲಾಗಿದ್ದು, ಮೃತ್ಯುವಿನ ಬಗ್ಗೆ ಯಾವುದೇ ಅನುಮಾನ ಇಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

 

 

Please Share: