ಕರಾವಳಿ ವಾಯ್ಸ್ ನ್ಯೂಸ್
ಅಂಕೋಲಾ: ಕ್ರಶರ್ಗೆ ಕಲ್ಲು ಖಾಲಿ ಮಾಡುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಹತ್ತು ಚಕ್ರದ ಲಾರಿ ಚಾಲಕನ ಮೇಲೆಯೇ ಹರಿದು, ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ತಾಲೂಕಿನ ಬೋಗ್ರಿಬೈಲ್ನಲ್ಲಿ ಮಂಗಳವಾರ ನಡೆದಿದೆ.
ಹಟ್ಟಿಕೇರಿ ನಿವಾಸಿ ಮಾರುತಿ ರಾಮಚಂದ್ರ ನಾಯ್ಕ (50) ಮೃತಪಟ್ಟ ದುರ್ದೈವಿ. ಬೋಗ್ರಿಬೈಲ್ನ ರಾಜು ಕಳಸ ಮಾಲೀಕತ್ವದ ಕ್ರಶರ್ಗೆ ಎಂದಿನಂತೆ ಕಲ್ಲು ಸಾಗಿಸಿ ಬಂದಿದ್ದ ಮಾರುತಿ, ಲಾರಿಯಿಂದ ಕೆಳಗಿಳಿದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.

ಲಾರಿಯನ್ನು ನಿಲ್ಲಿಸಿ ಕಲ್ಲು ಖಾಲಿ ಮಾಡುವ ಸಂದರ್ಭದಲ್ಲಿ ಹ್ಯಾಂಡ್ಬ್ರೇಕ್ ಹಾಕದ ಕಾರಣ ಲಾರಿ ಏಕಾಏಕಿ ಚಲಿಸಲು ಆರಂಭಿಸಿದೆ ಎನ್ನಲಾಗಿದೆ. ಅಪಾಯ ಅರಿತ ಮಾರುತಿ ಲಾರಿಯನ್ನು ತಡೆದು ನಿಲ್ಲಿಸಲು ಪ್ರಯತ್ನಿಸಿದರಾದರೂ, ನಿಯಂತ್ರಣಕ್ಕೆ ಬಾರದ ವಾಹನ ಅವರ ಮೇಲೆಯೇ ಹರಿದು ಪಲ್ಟಿಯಾಗಿದೆ. ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಅಂಕೋಲಾ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಮೃತ ಮಾರುತಿ ನಾಯ್ಕ ಅವರು ಪತ್ನಿ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಕುಟುಂಬದ ಆಧಾರವಾಗಿದ್ದ ವ್ಯಕ್ತಿಯನ್ನು ದುರಂತವೊಂದು ಕಸಿದುಕೊಂಡಿದ್ದು, ಇದೀಗ ಅವರ ಕುಟುಂಬದ ಬದುಕು ಪ್ರಶ್ನಾರ್ಥಕವಾಗಿದೆ. ಘಟನೆಗೆ ನಿಖರ ಕಾರಣ ಹಾಗೂ ಸುರಕ್ಷತಾ ಕ್ರಮಗಳ ಕುರಿತು ಸಮಗ್ರ ಪರಿಶೀಲನೆ ನಡೆಯಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
