ಕರಾವಳಿ ವಾಯ್ಸ್ ನ್ಯೂಸ್ 

ಅಂಕೋಲಾ: ಜನರ ಸೇವೆಯಲ್ಲೇ ಆನಂದ ಕಾಣುವ ನಿತ್ಯಾನಂದ ನಾಯ್ಕ ಹಟ್ಟಿಕೇರಿ ಇದೀಗ ಉರಗ ಸಂರಕ್ಷಣೆಯ ಮೂಲಕವೂ ಗಮನ ಸೆಳೆದಿದ್ದಾರೆ. ಜನವಸತಿ ಪ್ರದೇಶಕ್ಕೆ ನುಗ್ಗಿದ್ದ ಸುಮಾರು 5 ಅಡಿ ಉದ್ದದ ಹೆಬ್ಬಾವನ್ನು ಯಾವುದೇ ಆತಂಕವಿಲ್ಲದೆ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

ಅಂಕೋಲಾ ತಾಲೂಕಿನ ಹಟ್ಟಿಕೇರಿ ಪಂಚಾಯಿತಿ ವ್ಯಾಪ್ತಿಯಲ್ಲಿ ಶನಿವಾರ ಮುಂಜಾನೆ ಜನವಸತಿ ಪ್ರದೇಶದಲ್ಲಿ ಬೃಹತ್ ಹೆಬ್ಬಾವು ಕಾಣಿಸಿಕೊಂಡು ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು. ವಿಷಯ ತಿಳಿದು ಸ್ಥಳಕ್ಕೆ ತೆರಳಿದ ನಿತ್ಯಾನಂದ, ಜಾಗರೂಕತೆಯಿಂದ ಹೆಬ್ಬಾವನ್ನು ಹಿಡಿದು, ಅರಣ್ಯ ಇಲಾಖೆಯ ಸಿಬ್ಬಂದಿ ಮಂಜುನಾಥ್ ಲೋಕಪ್ಪ ನಾಯ್ಕ ಅವರ ಸಹಕಾರದೊಂದಿಗೆ ಹಟ್ಟಿಕೇರಿ ಅರಣ್ಯ ವ್ಯಾಪ್ತಿಯಲ್ಲಿ ಸುರಕ್ಷಿತವಾಗಿ ಬಿಟ್ಟರು.

‘ಉರಗ ಸಂರಕ್ಷಕ ಮಹೇಶ್ ನಾಯ್ಕ ಅವರ್ಸಾ ಅವರ ಸೇವೆಯಿಂದ ಪ್ರೇರಣೆ ಪಡೆದು ಉರಗಗಳ ರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದೇನೆ’ ಎಂದು ನಿತ್ಯಾನಂದ ನಾಯ್ಕ ತಿಳಿಸಿದ್ದಾರೆ.

ಜನರ ಸಂಕಷ್ಟಕ್ಕೆ ಸ್ಪಂದಿಸುವ ಸಾಮಾಜಿಕ ಸೇವೆಯ ಜೊತೆಗೆ, ಮೂಕ ಜೀವಿಗಳ ರಕ್ಷಣೆಯಲ್ಲೂ ತೊಡಗಿಸಿಕೊಂಡಿರುವ ನಿತ್ಯಾನಂದ ನಾಯ್ಕ ಅವರ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.

 

ಹೆಬ್ಬಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಡುತ್ತಿರುವ ನಿತ್ಯಾನಂದ ನಾಯ್ಕ

 

 

Please Share: