ಕರಾವಳಿ ವಾಯ್ಸ್ ನ್ಯೂಸ್
ಹೊನ್ನಾವರ: ತಾಲೂಕಿನ ಮಂಕಿ ಅರಣ್ಯ ವಲಯದಲ್ಲಿ ಸುಮಾರು ಹತ್ತು ವರ್ಷಗಳ ಹಿಂದೆ ಅಕ್ರಮವಾಗಿ ಕಾಡಿಗೆ ಪ್ರವೇಶಿಸಿ ಜಿಂಕೆಯನ್ನು ಬೇಟೆಯಾಡಿ, ಬಳಿಕ ಮನೆಯಲ್ಲಿ ಪಾಲು ಮಾಡುವ ವೇಳೆ ಸಿಕ್ಕಿಬಿದ್ದ ಪ್ರಕರಣದಲ್ಲಿ ಮೊದಲ ಆರೋಪಿಗೆ ನ್ಯಾಯಾಲಯ ದಂಡ ವಿಧಿಸಿದೆ.
ಮಂಕಿ ವಡಗೇರಿ ಗ್ರಾಮದ ರಾಮ ಪುಟ್ಟ ನಾಯ್ಕ ಎಂಬುವವನನ್ನು ಈ ಪ್ರಕರಣದಲ್ಲಿ ಮೊದಲ ಆರೋಪಿಯಾಗಿ ಗುರುತಿಸಲಾಗಿದ್ದು, ಹೊನ್ನಾವರದ ಹೆಚ್ಚುವರಿ ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಅನಿಲ್ ಜೋನ್ ಸಿಕ್ಕೇರಾ ಅವರು ವಿಚಾರಣೆ ನಡೆಸಿ ಆರೋಪಿಗೆ ₹15,000 ದಂಡ ವಿಧಿಸಿದ್ದಾರೆ.
ಈ ಸಂಬಂಧ ಮಂಕಿ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಆಗಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಾಲಚಂದ್ರ ಹೆಚ್. ಸಿ. ಅವರು ನಡೆಸಿ, ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಪೂರ್ಣಿಮಾ ಮಾದೇವ ನಾಯ್ಕ ಅವರು 8 ಸಾಕ್ಷಿದಾರರನ್ನು ವಿಚಾರಣೆ ನಡೆಸಿ ವಾದ ಮಂಡಿಸಿದರು. ಪ್ರಕರಣದ ವಿಚಾರಣೆಯ ನಂತರ ನ್ಯಾಯಾಲಯ ಆರೋಪಿಗೆ ದಂಡ ವಿಧಿಸಿ ತೀರ್ಪು ನೀಡಿದೆ.

