ಕರಾವಳಿ ವಾಯ್ಸ್ ನ್ಯೂಸ್ 

ಶಿರಸಿ: ದಿನಗಟ್ಟಲೆ ಶ್ರಮಿಸಿ ಬೆಳೆದ ಕಲ್ಲಂಗಡಿ ಹಣ್ಣುಗಳು ಮಾರುಕಟ್ಟೆ ಸೇರುವ ಮುನ್ನವೇ ರಸ್ತೆ ಮಧ್ಯೆ ಚೆಲ್ಲಾಪಿಲ್ಲಿಯಾಗಿದ ದಾರುಣ ಘಟನೆ ತಾಲೂಕಿನ ಬೆಳ್ಳನಕೇರಿ ಗ್ರಾಮದ ಬಾಂದಾರು ಸಮೀಪ ಸೋಮವಾರ ರಾತ್ರಿ ಸಂಭವಿಸಿದೆ.

ಕಲ್ಲಂಗಡಿ ಹಣ್ಣುಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ, ಲಕ್ಷಾಂತರ ರೂಪಾಯಿ ಮೌಲ್ಯದ ಹಣ್ಣುಗಳು ಹಾನಿಗೊಳಗಾಗಿರುವ ಸಾಧ್ಯತೆ ವ್ಯಕ್ತವಾಗಿದೆ.

ಘಟನೆಯ ತೀವ್ರತೆಯಿಂದ ಲಾರಿಯಲ್ಲಿ ತುಂಬಿದ್ದ ಕಲ್ಲಂಗಡಿಗಳು ರಸ್ತೆ ಮೇಲೆ ಹರಡಿಕೊಂಡಿದ್ದು, ಕೆಲ ಹಣ್ಣುಗಳು ಒಡೆದು ನಾಶವಾಗಿದ್ದವು. ರೈತನ ಶ್ರಮ, ನಿರೀಕ್ಷೆ— ಈ ಎಲ್ಲವೂ ಒಂದೇ ಕ್ಷಣದಲ್ಲಿ ಹಾಳಾದ ದೃಶ್ಯ ಕಂಡು ಸ್ಥಳೀಯರ ಮನಕಲಕುವಂತಾಯಿತು. ದುಡಿಮೆ ಮಾಡಿ ಬೆಳೆದ ಬೆಳೆ ಮಾರುಕಟ್ಟೆ ತಲುಪುವ ಮುನ್ನವೇ ಹೀಗೆ ನಾಶವಾಗಿರುವುದು ರೈತರಿಗೆ ದೊಡ್ಡ ಆರ್ಥಿಕ ಹೊಡೆತವಾಗಿದೆ.

ಅಪಘಾತದಲ್ಲಿ ಲಾರಿ ಚಾಲಕನಿಗೂ ಗಾಯಗಳಾಗಿದ್ದು, ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕನ ಸ್ಥಿತಿ ಸ್ಥಿರವಾಗಿದೆಯೆಂದು ತಿಳಿದುಬಂದಿದೆ. ಅಪಘಾತದ ವೇಳೆ ಸ್ಥಳೀಯರು ಧಾವಿಸಿ ನೆರವಿಗೆ ಬಂದಿದ್ದು, ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ಕರೆದೊಯ್ಯುವಲ್ಲಿ ಸಹಕರಿಸಿದರು.

ಈ ನಡುವೆ ಕೆಲವರು ರಸ್ತೆ ಮೇಲೆ ಚೆಲ್ಲಾಪಿಲ್ಲಿಯಾದ ಹಣ್ಣುಗಳನ್ನು ಸಂಗ್ರಹಿಸಲು ಮುಂದಾದರೆ, ಇನ್ನೂ ಕೆಲವರು ಹಾನಿಗೊಂಡ ಹಣ್ಣುಗಳನ್ನು ನೋಡಿ ಕಳವಳ ವ್ಯಕ್ತಪಡಿಸಿದರು. ಅಪಘಾತದ ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಾಹನ ಪಲ್ಟಿಯಾಗಲು ಕಾರಣವಾದ ಸಂದರ್ಭಗಳ ಕುರಿತು ತನಿಖೆ ಕೈಗೊಂಡಿದ್ದಾರೆ.

ಈ ಸಂಬಂಧ ಸಂಬಂಧಿತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

 

 

Please Share: