ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ರವಿವಾರ ಕಾರವಾರದಲ್ಲಿ ಮಾಧ್ಯಮಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ ಸಿಲುಕಿರುವ ಪ್ರಕರಣದಲ್ಲಿ ಸರ್ಕಾರದ ಹಸ್ತಕ್ಷೇಪಕ್ಕೆ ಅವಕಾಶವೇ ಇಲ್ಲ ಎಂದು ಸ್ಪಷ್ಟಪಡಿಸಿದರು.
“ಲೋಕಾಯುಕ್ತವು ಸಂಪೂರ್ಣ ಸ್ವತಂತ್ರ ಸಂಸ್ಥೆ. ಅದರ ಕಾರ್ಯದಲ್ಲಿ ನಾನು ಅಥವಾ ನಮ್ಮ ಸರ್ಕಾರ ಯಾವುದೇ ರೀತಿಯಲ್ಲಿ ತಲೆಹಾಕುವುದಿಲ್ಲ. ಈ ಪ್ರಕರಣದ ಬಗ್ಗೆ ನಾವು ಯಾರೂ ವಿಚಾರಣೆ ನಡೆಸುವುದಿಲ್ಲ. ಸಂಬಂಧಪಟ್ಟವರು ತಾವೇ ತಮ್ಮ ಮಟ್ಟದಲ್ಲಿ ಉತ್ತರಿಸಬೇಕು. ಬಿಜೆಪಿಯವರೇ ಈ ಬಗ್ಗೆ ಮಾತನಾಡಬೇಕು,” ಎಂದು ಅವರು ಗಟ್ಟಿಯಾಗಿ ಹೇಳಿದರು.
ಶಾಸಕ ಇಕ್ಬಲ್ ಹುಸೇನ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ, “ಇಕ್ಬಾಲ್ ಹುಸೇನ್ ಬಾಯಿ ಮುಚ್ಚಿಕೊಂಡು ಇರಬೇಕು. ರವಿ, ಶಿವಗಂಗಾ ಕೂಡ ಅನಗತ್ಯವಾಗಿ ಮಾತನಾಡಬಾರದು. ಅವರು ಸುಮ್ಮನಿದ್ದರೆ ನನಗೆ ಒಳ್ಳೆಯದಾಗುತ್ತದೆ,” ಎಂದು ಕಟುವಾಗಿ ತಿರುಗೇಟು ನೀಡಿದರು.
ವಿದೇಶ ಪ್ರವಾಸದ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ವಿದೇಶಕ್ಕೆ ಹೋದವರೆಲ್ಲ ನಮ್ಮವರೇ. ಅವರು ಹಿಂದಿರುಗಿದ ಬಳಿಕ ಯಾಕೆ ಹೋಗಿದ್ದೀರಿ ಎಂದು ಕೇಳುತ್ತೇವೆ. ಅನಗತ್ಯ ಊಹಾಪೋಹಗಳಿಗೆ ಅವಕಾಶ ಕೊಡಬಾರದು,” ಎಂದು ಹೇಳಿದರು.
ಈ ಮೂಲಕ ಲೋಕಾಯುಕ್ತ ವಿಚಾರದಲ್ಲಿ ಸರ್ಕಾರದ ನಿಲುವು ಸ್ಪಷ್ಟವಾಗಿದ್ದು, ರಾಜಕೀಯ ವಾಗ್ವಾದಗಳ ನಡುವೆಯೂ ತನಿಖಾ ಸಂಸ್ಥೆಗಳ ಸ್ವಾಯತ್ತತೆಯನ್ನು ಕಾಪಾಡಲಾಗುವುದು ಎಂಬ ಸಂದೇಶವನ್ನು ಡಿಸಿಎಂ ನೀಡಿದರು.
