ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ನಗರದ ನಂದನಗದ್ದಾ ಟೋಲ್ ನಾಕಾ ಬಳಿ ಗುರುವಾರ ಸಂಜೆ ಕಾಲೇಜು ವಿದ್ಯಾರ್ಥಿಗೆ ಒಂದೇ ಒಂದು ಕಾರಣವಿಲ್ಲದೆ ಪಿಸ್ತೂಲು ತೋರಿಸಿ ಬೆದರಿಸಿದ ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.

ಸದಾಶಿವಗಡದ ದೇವಭಾಗ ಮೂಲದ ದರ್ಶನ್ ಪುರಂದರ ತಾಂಡೇಲ್ (17) ಎಂಬ ವಿದ್ಯಾರ್ಥಿಗೆ ಬಿಣಗಾದ ಸಂದೀಪ ಕೆ. ನಾಯ್ಕ ಎಂಬ ವ್ಯಕ್ತಿ ಬೆದರಿಕೆ ಹಾಕಿದ ಘಟನೆ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವಾಗಿ ದಾಖಲಾಗಿದೆ.

ಘಟನೆಯ ವಿವರ ಹೀಗಿದೆ: 

ಪ್ರತಿ ದಿನದಂತೆ ದರ್ಶನ್ ಹಾಗೂ ಅವರ ಇಬ್ಬರು ಸ್ನೇಹಿತರು ಪ್ರಿಮಿಯರ್ ಕಾಲೇಜಿನಿಂದ ತರಗತಿಗಳನ್ನು ಮುಗಿಸಿ ಸಂಜೆ ನಡೆದು ಮನೆ ಕಡೆ ಬರುತ್ತಿದ್ದರು. ಸಾಮಾನ್ಯವಾಗಿ ಕಾಲೇಜು ಬಿಟ್ಟು ಹೊರಟ ನಂತರ ವಿದ್ಯಾರ್ಥಿಗಳ ಮಧ್ಯೆ ನಡೆಯುವ ಹಾಸ್ಯ–ಮಸ್ಕರಿಯ ನಡುವೆ ದರ್ಶನ್ ನಕ್ಕಿದ್ದರು. ಇದೇ ವೇಳೆಯಲ್ಲಿ ಮಹಾರಾಷ್ಟ್ರ ನೋಂದಣಿಯ ಕಾರು ಅಕಸ್ಮಾತ್ ವಿದ್ಯಾರ್ಥಿಗಳ ಬಳಿ ಬಂದು ನಿಂತಿತು.

ಕಾರಿನಿಂದ ಇಳಿದ ಆರೋಪಿತ ಸಂದೀಪ ನಾಯ್ಕ, “ಯಾಕೆ ನಗುತ್ತಿದ್ದೀರಿ? ಯಾರ ಮೇಲೂ ನಗುತ್ತಿದ್ದೀರಾ?'” ಎಂದು ಕಿಡಿಕಾರಿದರು. ವಿದ್ಯಾರ್ಥಿಗಳು “ನಮ್ಮಲ್ಲೇ ನಾವು ಮಾತನಾಡುತ್ತಾ ನಕ್ಕಿದ್ದೇವೆ, ನಿಮಗೆ ಸಂಬಂಧವಿಲ್ಲ'” ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದಾಗ್ಯೂ, ಉತ್ತರ ಕೇಳಿದ್ದಕ್ಕಿಂತ ಕೇಳದೇ ಇದ್ದಂತೆ ಸಂದೀಪ ನಾಯ್ಕ ಅವರು ಮತ್ತೊಮ್ಮೆ ಅದೇ ಪ್ರಶ್ನೆ ಕೇಳಿ ವಾತಾವರಣ ತೀವ್ರಗೊಳಿಸಿದರು.

ಸಿಟ್ಟಿನಲ್ಲಿದ್ದ ಆರೋಪಿ ನಂತರ ತಾಳ್ಮೆ ತಪ್ಪಿ ಕಾರಿನೊಳಗೆ ಕೈ ಹಾಕಿ ಒಂದು ಪಿಸ್ತೂಲು ತರಹದ ಆಯುಧ ಹೊರತೆಗೆದು, ವಿದ್ಯಾರ್ಥಿಗಳತ್ತ ಗುರಿ ತೋರಿಸಿ “`Be aware of me, I will shoot you all'” ಎಂದು ಇಂಗ್ಲಿಷಿನಲ್ಲಿ ಬೆದರಿಕೆ ಕೂಗಿದರು.

ಈ ಅನಿರೀಕ್ಷಿತ ದಾಳಿಕೋರನ ವರ್ತನೆಗೆ ಹೆದರಿದ ವಿದ್ಯಾರ್ಥಿಗಳು ತಕ್ಷಣ ಸ್ಥಳವನ್ನು ಬಿಟ್ಟು ಮನೆ ಕಡೆ ಓಡಿ ತಪ್ಪಿಸಿಕೊಂಡಿದ್ದಾರೆ.

ಮನೆಗೆ ತಲುಪುತ್ತಿದ್ದಂತೆ ದರ್ಶನ್ ಈ ಘಟನೆ ಬಗ್ಗೆ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಗಂಭೀರತೆಯನ್ನು ಮನಗಂಡ ಕುಟುಂಬವು ತಕ್ಷಣ ಕಾರವಾರ ನಗರ ಠಾಣೆಗೆ ದೂರು ನೀಡಿದ್ದು, ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸಾರ್ವಜನಿಕ ರಸ್ತೆಯಲ್ಲಿ ವಿದ್ಯಾರ್ಥಿಗಳ ಮೇಲೆ ಆಯುಧ ತೋರಿಸಿದ ಘಟನೆ ಸ್ಥಳೀಯರಲ್ಲಿ ಭೀತಿಯನ್ನು ಉಂಟುಮಾಡಿದ್ದು, ಕಾನೂನು ಸುವ್ಯವಸ್ಥೆ ಪ್ರಶ್ನೆಗೆ ಒಳಗಾಗಿದೆ. ವಿದ್ಯಾರ್ಥಿಗಳು, ಪೋಷಕರು ಮತ್ತು ಸಾರ್ವಜನಿಕರು ಶೀಘ್ರ ಕ್ರಮ ಕೈಗೊಂಡು ಕಾನೂನುಬಾಹಿರ ವರ್ತಿಸಿದ ಆರೋಪಿಯ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

 

 

 

Please Share: