ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಮೊಲ ಸಿಂಹವನ್ನು ಮೋಸಗೊಳಿಸಿ ಬಾವಿಗೆ ಬೀಳಿಸಿದ ಕಥೆಯನ್ನು ನೆನಪಿಸುವಂತೆ, ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಳಗಾ ಗ್ರಾಮದಲ್ಲಿ ಚಿರತೆ ಬಾವಿಗೆ ಬಿದ್ದ ಘಟನೆ ಗುರುವಾರ ರಾತ್ರಿ ನಡೆದಿದೆ.
ಕಾಡಿನಿಂದ ಆಹಾರ ಅರಸುತ್ತಾ ಗ್ರಾಮ ಪ್ರದೇಶಕ್ಕೆ ಬಂದಿದ್ದ ಚಿರತೆ ಕತ್ತಲಿನಲ್ಲಿ ಬಾವಿಯನ್ನು ಗಮನಿಸದೆ ಅದರಲ್ಲಿ ಬಿದ್ದಿದೆ ಎಂದು ತಿಳಿದುಬಂದಿದೆ. ರಾತ್ರಿ ವೇಳೆ ಈ ಘಟನೆ ನಡೆದಿದ್ದು, ಬೆಳಿಗ್ಗೆ ಗ್ರಾಮಸ್ಥರು ಬಾವಿಯೊಳಗೆ ಚಿರತೆ ಸಿಲುಕಿಕೊಂಡಿರುವುದನ್ನು ಗಮನಿಸಿದ್ದಾರೆ.
ಚಿರತೆ ಬಾವಿಯೊಳಗೆ ಇರುವ ವಿಚಾರ ತಿಳಿದು ಗ್ರಾಮದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣವೇ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಬಾವಿಯೊಳಗೆ ಸಿಲುಕಿಕೊಂಡಿದ್ದ ಚಿರತೆಯನ್ನು ಯಾವುದೇ ಹಾನಿಯಾಗದಂತೆ ರಕ್ಷಿಸಲು ಬಾವಿಯೊಳಗೆ ಏಣಿ ಇಳಿಸಿ ಮೇಲಕ್ಕೆ ಬರಲು ವ್ಯವಸ್ಥೆ ಮಾಡಲಾಯಿತು.
ಸ್ವಲ್ಪ ಸಮಯದ ಬಳಿಕ ಚಿರತೆ ಏಣಿ ಏರಿ ಬಾವಿಯಿಂದ ಹೊರಬಂದಿದ್ದು, ಅಲ್ಲಿಂದಲೇ ಸಮೀಪದ ಕಾಡಿನತ್ತ ಓಡಿಹೋಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಜನರನ್ನು ದೂರವಿರಲು ಸೂಚಿಸಿದರು.
ಚಿರತೆ ಸುರಕ್ಷಿತವಾಗಿ ಕಾಡಿನತ್ತ ತೆರಳಿದ ನಂತರ ಗ್ರಾಮಸ್ಥರು ನಿಟ್ಟುಸಿರು ಬಿಟ್ಟರು. ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಳಗಾ ಗ್ರಾಮದಲ್ಲಿ ನಡೆದ ಈ ಘಟನೆ ಕೆಲಕಾಲ ಗ್ರಾಮಸ್ಥರಲ್ಲಿ ಭಯ ಮತ್ತು ಆತಂಕ ಮೂಡಿಸಿತ್ತು.
