ಚನ್ನಪಟ್ಟಣ: ಹತ್ತಾರು ವರ್ಷಗಳಿಂದ ನಿರಂತರವಾಗಿ ಕಾಡಾನೆ ಹಾವಳಿಗೆ ತತ್ತರಿಸುತ್ತಿರುವ ರೈತರು ಸರ್ಕಾರ ಮತ್ತು ಅರಣ್ಯ ಇಲಾಖೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲಿ, ಪುಂಡಾನೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಸಿದ್ಧತೆ ನಡೆಸುತ್ತಿದ್ದ ಬೆನ್ನಲ್ಲೇ ದುರ್ಘಟನೆ ಸಂಭವಿಸಿದೆ.
ತಾಲ್ಲೂಕಿನ ಗೊಲ್ಲರದೊಡ್ಡಿ ಗ್ರಾಮದ ಸಮೀಪದ ಬ್ರಹ್ಮಣಿಪುರದ ಈರಯ್ಯ ಅವರ ತೆಂಗಿನ ತೋಟಕ್ಕೆ ನುಗ್ಗಿದ 35-40 ವರ್ಷದ ಗಂಡಾನೆ ತೆಂಗಿನ ಮರದ ಸುಳಿ ತಿನ್ನಲು ಮರವನ್ನು ಬಾಗಿಸುವ ವೇಳೆ, ಮರದ ಮೇಲಿಂದ ಹಾದುಹೋಗಿದ್ದ 11 ಕೆವಿ ಸಾಮರ್ಥ್ಯದ ವಿದ್ಯುತ್ ತಂತಿಗೆ ತಗುಲಿ ವಿದ್ಯುತ್ ಪ್ರವಹಿಸಿ ಆನೆ ಸ್ಥಳದಲ್ಲೇ ಮೃತಪಟ್ಟಿದೆ.
ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಗ್ರಾಮಸ್ಥರು ಕೆಲಕಾಲ ವಾಗ್ವಾದ ನಡೆಸಿದರು. ನಂತರ ಪಶುವೈದ್ಯರ ತಂಡ ಮರಣೋತ್ತರ ಪರೀಕ್ಷೆ ನಡೆಸಿ, ಮೃತ ಕಾಡಾನೆಗೆ ಸ್ಥಳದಲ್ಲೇ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಘಟನಾ ಸ್ಥಳದಲ್ಲಿ ಡಿಎಪ್ಓ ರಾಮಕೃಷ್ಣಪ್ಪ ಎಂ., RFO ಮಲ್ಲೇಶ್, ರಾಮನಗರ RFO ಮಹಮದ್ ಮನ್ಸೂರ್ ಸೇರಿದಂತೆ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಜೊತೆಗೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಭದ್ರತೆ ಒದಗಿಸಿದರು.


