ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ನಗರಸಭೆಯ ಕಸ ಸಂಗ್ರಹಿಸುವ ವಾಹನ ಪಾದಚಾರಿ ಮಹಿಳೆಯೊಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ಮಧ್ಯಾಹ್ನ ನಗರದ ರಾಷ್ಟ್ರೀಯ ಹೆದ್ದಾರಿ 66 ರ ರಾಕ್ ಗಾರ್ಡನ್ ಬಳಿ ನಡೆದಿದೆ. ಈ ಸಂಬಂಧ ಕಾರವಾರ ಶಹರ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಯಗೊಂಡ ಮಹಿಳೆಯನ್ನು ಚಿತ್ತಾಕುಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಶಿಕಲಾ ನಾರಾಯಣ ಕಾರ್ವಿ (60) ಎಂದು ಗುರುತಿಸಲಾಗಿದೆ.
ದೂರಿನ ಪ್ರಕಾರ, ಅವರು ಎನ್ಎಚ್–66 ರ ಐಸ್ ಫ್ಯಾಕ್ಟರಿ–ಕಾಜುಬಾಗ್ ಎಸ್ಪಿ ಆಫೀಸ್ ಲಿಂಕ್ ರಸ್ತೆಯಿಂದ ರಸ್ತೆ ದಾಟಿ ಸರ್ವಿಸ್ ರಸ್ತೆಗೆ ಬರುತ್ತಿದ್ದ ವೇಳೆ, ನಗರಸಭೆಗೆ ಸೇರಿದ KA-30 A 2245 ಸಂಖ್ಯೆಯ ಕಸ ಸಂಗ್ರಹಿಸುವ ವಾಹನವು ದಿವೇಕರ್ ಕಾಲೇಜ್ ಕಡೆಯಿಂದ ಕಾರವಾರ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯದಿಂದ ಬರುತ್ತಿದ್ದು, ರಾಕ್ ಗಾರ್ಡನ್ ಹತ್ತಿರ ಪಾದಚಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ವಾಹನವನ್ನು ಅಪಾದಿತನಾಡ ಶಿರವಾಡದ ಜಾಂಬಾ ನಿವಾಸಿ ಅಜಯ ಗೌರೀಶ ಕಡವಾಡಕರ (29) ಚಾಲನೆ ಮಾಡುತ್ತಿದ್ದು, ಅಪಘಾತದಲ್ಲಿ ಶಶಿಕಲಾ ಅವರ ಎಡಗಾಲಿಗೆ ಭಾರೀ ಗಾಯವಾಗಿದ್ದು, ಎರಡೂ ಕೈಗಳಿಗೆ ಗಾಯಗಳಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಗಾಯಗೊಂಡ ಮಹಿಳೆಯನ್ನು ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಕುರಿತು ಕಾರವಾರ ಶಹರ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
